ಭಾನುವಾರ, ಏಪ್ರಿಲ್ 24, 2011

ನೇತ್ರಾವತಿ ತಿರುವು: ಡಾ. ಮಧು ಸೀತಪ್ಪನವರೊಂದಿಗೆ ಸಂವಾದ


ಪ್ರಿಯ ಮಧು ಸೀತಪ್ಪನವರಿಗೆ ನಮಸ್ಕಾರ.
ದೂರದ ಬ್ರಿಟನ್ನಿನಲ್ಲಿದ್ದೂ ತಾಯಿನಾಡಿನ ಸಮಸ್ಯೆಗಳ ಬಗ್ಗೆ ನೀವು ತೋರಿಸುತ್ತಿರುವ ಆಸಕ್ತಿಗಾಗಿ ಅಭಿನಂದನೆಗಳು.
ನಾನು ವಿಜಯ ಕರ್ನಾಟಕದಲ್ಲಿ ಪ್ರಕಟವಾದ ನಿಮ್ಮ ಲೇಖನವನ್ನು ಓದಿರಲಿಲ್ಲ. ಇತ್ತೀಚೆಗೆ ಅಕಸ್ಮಾತ್ತಾಗಿ ನಿಮ್ಮ ಬ್ಲಾಗನ್ನು ನೋಡಿದೆ. ನೇತ್ರಾವತಿ ತಿರುವು ಯೋಜನೆಯ ಕುರಿತು ನಾನು ಮೊದಲಿಂದಲೂ ಆಸಕ್ತಿ ತಳೆದವನು. ಹಾಗಾಗಿ ನಿಮ್ಮ ಲೇಖನಗಳನ್ನು ಕುತೂಹಲದಿಂದ ಓದಿದೆ. ಓದಿದ ನಂತರ ನನ್ನ ಕೆಲವು ವಿಚಾರಗಳನ್ನು ಮಂಡಿಸಿದ್ದೇನೆ. ನಿಮ್ಮಿಂದ ಉತ್ತರ ನಿರೀಕ್ಷಿಸುತ್ತೇನೆ.
"ಪ್ರಪಂಚದ ಮುಂದಿನ ಮಹಾಯುದ್ಧ ನೀರಿಗಾಗಿ ನಡೆಯಲಿದೆ" ಎಂದು ಯಾರೋ ಹೇಳಿದ್ದಾರಂತೆ. ನೀರು ದಿನದಿಂದ ದಿನಕ್ಕೆ ಅಮೂಲ್ಯವಾಗುತ್ತ ಹೋಗುತ್ತಿದೆ. ನಮ್ಮ ಚರ್ಚೆಯ ಮೂಲದಲ್ಲಿರುವುದೂ ನೀರೇ. ನೀರಿಲ್ಲದ ಬಯಲುಸೀಮೆಯ ಜನರ, ಅದರಲ್ಲೂ ಹೆಂಗಸರ ಕಷ್ಟ ನನಗೆ ಚೆನ್ನಾಗಿ ಅರ್ಥವಾಗುತ್ತದೆ. ಆದರೆ ಬಯಲು ಸೀಮೆಯ ಜನರ ಸಮಸ್ಯೆಗೆ ಪಶ್ಚಿಮ ಘಟ್ಟಗಳಿಂದ ನೀರು ಒಯ್ಯುವುದು ಪರಿಹಾರ ಅಲ್ಲ. ಅದು ಆಯಾ ಸ್ಥಳದಲ್ಲಿಯೇ ಪರಿಹಾರ ಮಾಡಿಕೊಳ್ಳಬೇಕಾದ ಸಮಸ್ಯೆ.
ನೀರಿನ ಸಮಸ್ಯೆ ಪರಿಹಾರವಾಗಬೇಕಾದರೆ ಮುಖ್ಯವಾಗಿ ಜನರ ಸಹಭಾಗಿತ್ವ ಬೇಕು. ಭಾರತಕ್ಕೆ ಅದರ ದೊಡ್ಡ ಪರಂಪರೆಯೇ ಇದೆ. ಬಹಳ ಹಿಂದಿನಿಂದಲೂ ಬಯಲು ಸೀಮೆಯಲ್ಲಿ ಕೆರೆಗಳೇ ನೀರಿನ ಮೂಲಗಳಾಗಿದ್ದವು. ಆದರೆ "ಅಭಿವೃದ್ಧಿ" ಆದ ಹಾಗೆ ವಿದ್ಯುತ್ ಬಂತು. ಬೋರ್ ವೆಲ್ ತೆಗೆಯುವುದು ಸಾಧ್ಯವಾಯಿತು. ಕೆರೆಗಳನ್ನು, ಅದರೊಂದಿಗೆ ಬೆಳೆದು ಬಂದಿದ್ದ ನೀರು ಹಂಚಿಕೆಯ ವ್ಯವಸ್ಥೆಯನ್ನು ನಾವು ಕೈಬಿಟ್ಟೆವು. ಈಗ "ಇದ್ದಿದ್ದಿಲ್ಲ ಪೆದ್ದಂಭಟ್ಟ" ಎಂಬಂತಾಗಿದೆ ನಮ್ಮ ಸ್ಥಿತಿ.
ಸರಕಾರವೇನೋ ಕೆರೆಗಳ ಪುನರುಜ್ಜೀವನ ಎಂಬ ಹೆಸರಿನಲ್ಲಿ ಹಣವನ್ನು "ನೀರಿನಂತೆ" (ಈಗ ಹಾಗೆ ಹೇಳುವ ಹಾಗಿಲ್ಲ ಅಲ್ಲವೆ?) ಚೆಲ್ಲುತ್ತಿದೆ. ಆದರೆ, ಎಲ್ಲಿಯವರೆಗೆ ಜನರ ಸಾಮೂಹಿಕ ಸಹಭಾಗಿತ್ವ ಇಲ್ಲವೋ, "ನಮ್ಮ ಊರ ಕೆರೆಗೆ ನಾವೇ ಜವಾಬ್ದಾರರು" ಎಂಬ ಭಾವನೆ ಪುನಃ ಬರುವುದಿಲ್ಲವೋ, ಎಲ್ಲಿಯವರೆಗೆ ನಾವು ಪ್ರತಿಯೊಂದಕ್ಕೂ ಸರಕಾರದ ಕಡೆಗೆ ನೋಡುತ್ತಿರುತ್ತೇವೋ ಅಲ್ಲಿಯವರೆಗೂ ಸಮಸ್ಯೆಗೆ ಪರಿಹಾರವಿಲ್ಲ.
ಬಹುಶಃ ವಿನಾಯಕರೂ ಇದನ್ನು ಹೇಳಿರಬೇಕು. ನನ್ನ ನಿಲುವೂ ಅದೇ: ಜನಸಂಖ್ಯೆಯ ನಿಯಂತ್ರಣ, ಕೆರೆಗಳ ಪುನರುಜ್ಜೀವನ, ಜನರ ಸಹಭಾಗಿತ್ವ, ಮಳೆನೀರು ಕೊಯ್ಲು, ನೀರು ನಿರ್ವಹಣೆ, ಕಾಡುಗಳನ್ನು ಮತ್ತೆ ಬೆಳೆಸುವುದು ಮುಂತಾದ ವಿಧಾನಗಳಿಂದಲೇ ಬಯಲುಸೀಮೆಯ ನೀರಿನ ಸಮಸ್ಯೆ ಪರಿಹಾರವಾಗಬೇಕು. ಅದನ್ನು ಸಾಧಿಸಲು ಸಾಧ್ಯ. ರಾಳೇಗಾಂವ್ ಸಿದ್ದಿಯಲ್ಲಿ ಅಣ್ಣಾ ಹಜಾರೆ ಅದನ್ನು ಸಾಧಿಸಿ ತೋರಿಸಿದ್ದಾರೆ ಎಂದುಕೊಂಡಿದ್ದೇನೆ. ನೀರಿನ ಕುರಿತಾದ ಶ್ರೀ ಪಡ್ರೆಯವರ ಪುಸ್ತಕಗಳನ್ನು ನೀವು ಓದಿದ್ದೀರೋ ಇಲ್ಲವೋ ಗೊತ್ತಿಲ್ಲ. ಒಂದು ವೇಳೆ ಇಲ್ಲವಾದರೆ ದಯವಿಟ್ಟು ಓದಿ ನೋಡಿ.
ಇನ್ನು ಪಶ್ಚಿಮಘಟ್ಟಗಳಿಂದ ನೀರು ಒಯ್ಯುವುದರ ಪರವಾಗಿ ನಿಮ್ಮ ಲೇಖನದಲ್ಲಿರುವ ಹಲವು ಅಂಶಗಳಿಗೆ ಉತ್ತರಿಸಲು ಇಲ್ಲಿ ಪ್ರಯತ್ನಿಸಿದ್ದೇನೆ. ವಾದ ನನ್ನ ಉದ್ದೇಶವಲ್ಲ. ಪಶ್ಚಿಮ ಘಟ್ಟವೆಂದರೆ ಚಿನ್ನದ ಮೊಟ್ಟೆ ಇಡುವ ಕೋಳಿ. ಅದರ ಹೊಟ್ಟೆ ಕೊಯ್ಯುವ ಕೆಲಸ ನಾವು ಮಾಡುವುದು ಬೇಡ.

ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಸುತ್ತಮುತ್ತಲಿರುವ ಇರುವ ಇಪ್ಪತ್ತೆರಡು ನದಿಗಳ ನೀರು ಅರಬ್ಬೀ ಸಮುದ್ರಕ್ಕೆ ಸೇರುತ್ತದೆ (೩೦೧೬ ಟಿ‌ಎಂಸಿ). ಅಂದರೆ ನೇತ್ರಾವತಿ ನದಿಯಿಂದ ಮಾತ್ರ ಅರಬ್ಬೀ ಸಮುದ್ರ ಜೀವಿಸಿಲ್ಲ. ಮುಂಗಾರು ಮಳೆಯ ಸಂದರ್ಭದಲ್ಲಿ ಈ ಜೀವನದಿಯಿಂದ ಪ್ರತಿದಿನ ೪೧೫ ಟಿ‌ಎಂಸಿಯಷ್ಟು ನೀರು ಸಮುದ್ರದ ಪಾಲಾದರೆ, ಉಳಿದ ೨೧ ನದಿಗಳು ಮತ್ತು ಅನೇಕ ಹಳ್ಳಗಳಿಂದ ೨೪೦೦ ಟಿ‌ಎಂಸಿಯಷ್ಟು ಸಿಹಿ ನೀರು ಸಮುದ್ರದಲ್ಲಿ ಕರಗುತ್ತದೆ. ಈ ಅಂಕಿ ಅಂಶಗಳನ್ನು ಏಕೆ ನಿಮ್ಮ ಮುಂದೆ ಇಡಲು ಇಚ್ಚಿಸುತ್ತೇನೆ ಎಂದರೆ, ವಿನಾಯಕ ಭಟ್ಟರು ತಮ್ಮ ಲೇಖನದಲ್ಲಿ ಈ ಯೋಜನೆಯಿಂದ ಸಮುದ್ರದ ಉಪ್ಪಿನಾಂಶ ಹೆಚ್ಚಾಗುತ್ತದೆ ಹಾಗೂ ನೇತ್ರಾವತಿ ನದಿಗೆ ಸಮುದ್ರದ ನೀರು ನುಗ್ಗುವುದರಿಂದ ನದಿಯ ಉಪ್ಪಿನಾಂಶವು ಹೆಚ್ಚಾಗುತ್ತದೆ ಎಂದಿದ್ದಾರೆ. ಈ ಯೋಜನೆಗೆ ನೇತ್ರಾವತಿ ನದಿಯಿಂದ ಕೇವಲ ೪೦ ಟಿ.ಎಂ.ಸಿ ನೀರನ್ನು ಮಾತ್ರ ಬಳಸುತ್ತೇವೆ. ಅಂದರೆ ನೇತ್ರಾವತಿಯ ಮಳೆಗಾಲದ ೪೧೫ ಟಿ.ಎಂ.ಸಿ.ಯಲ್ಲಿ ಕೇವಲ ಶೇ.೧೦ರಷ್ಟು ನೀರು ಕಡಿಮೆಯಾಗುವುದರಿಂದ ನದಿಯ ನೀರಿನ ಲವಣಾಂಶಗಳಾಗಲಿ ಅಥವಾ ಉಪ್ಪಿನಾಂಶವಾಗಲಿ ಅಥವಾ ಸಿಹಿ ನೀರಿನ ಜೀವರಾಶಿಯ ಆಹಾರಕ್ಕಾಗಲಿ ತೊಂದರೆಯಾಗುತ್ತದೆನ್ನುವುದು ಹಾಸ್ಯಾಸ್ಪದ. ಮತ್ತೊಂದು ಅವರ ಪ್ರಶ್ನೆಯೆಂದರೆ, ಸಮುದ್ರಕ್ಕೆ ಸೇರುವ ನದಿ ನೀರು ಕಡಿಮೆಯಾದರೆ ಸಮುದ್ರದ ಉಪ್ಪಿನಾಂಶ ಹೆಚ್ಚಾಗುವ ಆತಂಕ. ನೇತ್ರಾವತಿ ನದಿ ಸಮುದ್ರ ಸೇರುವ ಆಜು ಬಾಜಿನಲ್ಲಿ ಸುಮಾರು ೨೦೦೦ ಟಿ.ಎಂ.ಸಿ.ಯಷ್ಟು ನೀರು ಉಳಿದ ೨೧ ನದಿಗಳಿಂದ ಹಾಗು ಅನೇಕ ಹಳ್ಳಗಳಿಂದ ಮಳೆಗಾಲದಲ್ಲಿ ಸೇರುತ್ತದೆ. ಇದಲ್ಲದೆ ಸಮುದ್ರದ ಸಾವಿರಾರು ಚದರ ಕಿ.ಮಿ.ಗಳ ಮೇಲೆ ೪೫೦೦ ಮಿ.ಮಿ.ಗಿಂತ ಹೆಚ್ಚು ಮಳೆ ಬೀಳುವುದರಿಂದ ಸಾವಿರಾರು ಟಿ.ಎಂ.ಸಿ.ಯಷ್ಟು ಸಿಹಿ ನೀರು ಸಮುದ್ರಕ್ಕೆ ಸೇರುತ್ತಿರುವಾಗ ಸಮುದ್ರದ ಉಪ್ಪಿನಾಂಶ ಹೆಚ್ಚಾಗಿ ಮೀನುಗಾರರ ಜೀವನೋಪಾಯಕ್ಕೆ ತೊಂದರೆಯಾಗುತ್ತದೆ ಎಂದು ವಾದಿಸುವವರಿಗೆ ಏನೆನ್ನಬೇಕೊ ನನಗೆ ತಿಳಿಯುತ್ತಿಲ್ಲ. ಏಕೆಂದರೆ ಅರಬ್ಬೀ ಸಮುದ್ರದಂತಹ ಅಕ್ಷಯಪಾತ್ರೆಗೆ ಅಸಂಖ್ಯಾತ ನದಿಗಳ ನೀರು, ಆಕಾಶದಿಂದ ಬೀಳುವ ಮಳೆಯೆ ನೀರು ಬಂದು ಸೇರುತ್ತಲೇ ಇರುತ್ತದೆ.

ಪರಮಶಿವಯ್ಯನವರ ದೃಷ್ಟಿ ನೇತ್ರಾವತಿಯನ್ನು ತಿರುಗಿಸುವುದಕ್ಕೆ ಸೀಮಿತವಾಗಿಲ್ಲ. ಅವರ ವರದಿಯ ಒಂದನೇ ಅಧ್ಯಾಯದ ೧.೦೭ನೇ ಅಂಶ ಹೀಗಿದೆ: ".....conceiving this water for beneficial use, lies the INGENUITY of the Engineers, and marks as the first step in harnessing further waters of west flowing rivers."
೧.೦೮ರಲ್ಲಿ ಹೀಗಿದೆ:"..... It also paves way for utilising more water of west flowing rivers to drought affected areas" .
ಅಧ್ಯಾಯ ೩ರ ೩.೦೫ರಲ್ಲಿ ಹೀಗಿದೆ: "All the waters of East flowing Rivers have been harnessed (some projects are under construction) and it is time to plan for harvesting these west flowing river waters for beneficial use."
ಅಧ್ಯಾಯ ೨೦ರ ೨೦.೦೪ರಲ್ಲಿ ಹೀಗಿದೆ:
It is expected that west flowing waters can be diverted to East by installing Riversible turbines. When this new concept becomes feasible this can be adopted in our country, when there will be huge quantity of water available to our state.
ಇನ್ನು ನದಿಗಳ ಸಿಹಿನೀರು ಸಮುದ್ರವನ್ನು ಸೇರುವುದನ್ನು ತಡೆಯುವುದರಿಂದ ಆಗುವ ಪರಿಣಾಮಗಳೇನು ಎಂಬುದನ್ನು ತಜ್ನರು ಅಧ್ಯಯನ ಮಾಡಿ ವರದಿ ಕೊಡಬೇಕು. ಅದು ಜನಸಾಮಾನ್ಯರು ಉತ್ತರಿಸಬಹುದಾದ ಪ್ರಶ್ನೆಯಲ್ಲ.
ಮಂಗಳೂರಿನ ಸಮುದ್ರಕ್ಕೆ ಈಗಾಗಲೇ ಎಂ ಆರ್ ಪಿ ಎಲ್ ಮತ್ತಿತರ ಕಂಪೆನಿಗಳು ತಮ್ಮ ತ್ಯಾಜ್ಯವನ್ನು ಸುರಿಯುತ್ತಿವೆ. ಮಂಗಳೂರು ವಿಶೇಷ ಆರ್ಥಿಕ ವಲಯ ಕಂಪೆನಿ ಇನ್ನು ಸ್ವಲ್ಪ ಸಮಯದಲ್ಲೇ ತನ್ನ ತ್ಯಾಜ್ಯಗಳನ್ನು ಸಮುದ್ರಕ್ಕೆ ಬಿಡಲು ಪ್ರಾರಂಭಿಸುತ್ತದೆ. ದಿನದಿಂದ ದಿನಕ್ಕೆ ಆಧುನಿಕ ತಾಂತ್ರಿಕತೆಯಿಂದಾಗಿ ಹೆಚ್ಚು ಹೆಚ್ಚು ಅಪಾಯಕಾರಿ ತ್ಯಾಜ್ಯಗಳು ಹೆಚ್ಚು ಹೆಚ್ಚು ಪ್ರಮಾಣದಲ್ಲಿ ನದಿಗಳ ಮೂಲಕ ಸಮುದ್ರವನ್ನು ಸೇರುತ್ತಿದೆ. ಮೀನುಗಾರಿಕೆ ಮಾಡುವ ಡೀಸೆಲ್ ಚಾಲಿತ ದೋಣಿಗಳಿಂದಾಗಿಯೂ ಸಮುದ್ರದ ನೀರು ಮಲಿನಗೊಳ್ಳುತ್ತಿದೆ. ಇದರೊಂದಿಗೆ, ಸೇರಬೇಕಾದ ಸಿಹಿನೀರು ಸೇರದೆ ಹೋದರೆ ಏನಾದೀತು ಎಂಬುದನ್ನು ಅಧ್ಯಯನ ಮಾಡಿಯೇ ಹೇಳಬೇಕಾಗುತ್ತದೆ. ಮೇಲ್ನೋಟಕ್ಕೆ ಕಾಣುವಂತೆ, ಮೀನುಗಾರಿಕೆ ನಿಧಾನವಾಗಿಯಾದರೂ ಅಪಾಯಕ್ಕೆ ಸಿಕ್ಕಿಕೊಳ್ಳುತ್ತಿದೆ.


ಈ ಯೋಜನೆಯಲ್ಲಿ ಪಶ್ಚಿಮ ಘಟ್ಟಗಳ ತುದಿಯ ನೇತ್ರಾವತಿ ನದಿಯ ಒಟ್ಟು ಜಲಾಯನ ಪ್ರದೇಶದ ಶೇ.೧೦ರಷ್ಟು ಪ್ರದೇಶದಲ್ಲಿ ಮಾತ್ರ ಮಳೆ ಕೊಯ್ಲು ಮಾಡಲಾಗುತ್ತದೆ.

ಶೇ. ೧೦ ಎನ್ನುವುದು ಪ್ರಾರಂಭ ಮಾತ್ರ. ಮುಂದೆ ಅದು ಹೆಚ್ಚುತ್ತ ಹೋಗುತ್ತದೆ.

೧೯೧೩ರಲ್ಲಿ ನೇತ್ರಾವತಿ ನದಿ ಬತ್ತಿತ್ತು ಎಂದು ಮಾತ್ರ ತಿಳಿಸಲಾಗಿದೆ. ಆದರೆ ವಿನಾಯಕ್ ಅವರು ಎರಡು ಮುಖ್ಯ ಪ್ರವಾಹಗಳ (೧೯೨೪, ೧೯೭೪) ಬಗ್ಗೆ ತಿಳಿಸೇ ಇಲ್ಲ. ಆ ಎರಡು ಸಂದರ್ಭದಲ್ಲಿ ಬಂಟ್ವಾಳವು ಸಂಪೂರ್ಣ ಮುಳುಗಿ ಅಲ್ಲಿದ್ದ ನಿವಾಸಿಗಳು ಗುಳೆ ಎದ್ದು ಹೋಗಿದ್ದರು. ಅಷ್ಟಲ್ಲದೆ ಈ ನದಿಯಿಂದ ಅನೇಕ ಸಲ ತೀರದ ಪ್ರದೇಶಗಳು ಪ್ರವಾಹ ಪೀಡೆಯಿಂದ ಬಳಲಿದೆ.

ನಾನು ಸುಮಾರು ಮೂವತ್ತು ವರ್ಷದಿಂದ ಬಂಟ್ವಾಳದಲ್ಲಿದ್ದೇನೆ. ಬಂಟ್ವಾಳದವರಿಗೆ ನೆರೆ ಖಂಡಿತವಾಗಿಯೂ ಒಂದು ಸಮಸ್ಯೆಯಲ್ಲ.
(ಈ ನಡುವೆ ವಿನಾಯಕರದ್ದಾಗಲಿ, ಮೋಹನ ಹೆಗಡೆಯವರದ್ದಾಗಲಿ ಪ್ರತಿಕ್ರಿಯೆ ನನಗೆ ಓದಲು ಸಿಗಲಿಲ್ಲ. ಅದನ್ನು ಒದಗಿಸಬಹುದೆ?)


ಅರಣ್ಯ ನಾಶದ ಮುಖ್ಯ ಕಾರಣಗಳೆಂದರೆ ಜಮೀನಿನ ಒತ್ತುವರಿ ಮತ್ತು ಮರಗಳ ಕಳ್ಳ ಸಾಗಾಣಿಕೆ. ಇದಲ್ಲದೆ ಕೊಂಕಣ ರೈಲು ಯೋಜನೆಯ ಅನುಷ್ಠಾನದಲ್ಲಿ ೨೦೦೦ ಹೆಕ್ಟೆರುಗಳಿಗಿಂತ ಹೆಚ್ಚು ಅರಣ್ಯ ನಾಶವಾದದ್ದಲ್ಲದೆ, ೪೦ ಸುರಂಗಗಳ ಕೊರೆಯುವಿಕೆಯಿಂದ ಹಲವಾರು ದೊಡ್ಡ ಪ್ರಮಾಣದ ಭೂ ಕುಸಿತಗಳಾಗಿವೆ. ಇದಲ್ಲದೆ ಸಕಲೇಶಪುರದಿಂದ- ಮಂಗಳೂರಿನವರೆಗೆ ಕೈಗೆತ್ತಿಕೊಳ್ಳುವ ಡಬಲ್ ರೋಡ್ ರಚನೆಯಿಂದಲೂ ಸಹ ಅರಣ್ಯ ನಾಶವಾಗುವುದಲ್ಲದೆ, ಭೂ ಕುಸಿತ ಸಂಭವಿಸುವ ಸಾಧ್ಯತೆಗಿಳಿವೆ. ಹಾಗೆಂದು ಅಭಿವೃದ್ಧಿಯ ವಿಚಾರದಲ್ಲಾಗಲಿ ಅಥವಾ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕೆಲವು ತ್ಯಾಗ ಬಲಿದಾನಗಳನ್ನು ಮಾಡಬೇಕಾಗುತ್ತದೆ. ಯಾವುದೇ ಒಂದು ಮರವನ್ನು ಕಡಿದರೆ ಅದರ ಬದಲಿಗೆ ಮತ್ತೊಂದು ಗಿಡ ನೆಡಬೇಕೆಂದು ಒ‌ಔ‌ಇ‌ಈ ತಿಳಿಸಿರುವ ಬಗ್ಗೆ ಎಲ್ಲರಿಗೂ ತಿಳಿದಿದೆ. ಇದರ ಲಿಖಿತ ಭರವಸೆಯ ವಿನಃ ಕೇಂದ್ರ ಅರಣ್ಯ ಇಲಾಖೆ ಇಂತಹ ಯೋಜನೆಗಳಿಗೆ ಅವಕಾಶ ಕೊಡುವುದಿಲ್ಲ.

ಹಿಂದೆ ನಾಶವಾಗಿದೆ ಹೌದು. ಅದು ಇನ್ನು ಮುಂದೆ ಕಾಡನ್ನು ಉಳಿಸಿಕೊಳ್ಳುವುದಕ್ಕೆ ಕಾರಣವಾಗಬೇಕು, ಕಡಿಯುವುದಕ್ಕೆ ಸಮರ್ಥನೆಯಾಗಬಾರದು.

ಈ ಯೋಜನೆಗಾಗಿ ಕನಿಷ್ಠ ೦.೫ ಮೀ.ನಿಂದ ಗರಿಷ್ಠ ೫ ಮೀ ಪ್ರಮಾಣದ ಪ್ರೀ-ಸ್ಟ್ರೆಸ್ಡ್ ಆರ್.ಸಿ.ಸಿ. ಕೊಳವೆಗಳನ್ನು ಬಳಕೆ ಮಾಡಲಾಗುತ್ತದೆ. ನೂತನ ಮಾದರಿಯ ತಂತ್ರ ಜ್ಞಾನದಿಂದ ಕೊಳವೆಗಳನ್ನು ಅಳವಡಿಸುವುದರಿಂದ ಯಾವುದೇ ರೀತಿಯ ಬೃಹತ್ ಯತ್ರೋಪಕರಣಗಳ ಬಳಕೆಯ ಅವಶ್ಯಕತೆ ಇರುವುದಿಲ್ಲ. ನನ್ನ ಲೇಖನದಲ್ಲಿ ಈ ಪೈಪ್ ಅಳವಡಿಕೆಗೆ ಬೇಕಾಗುವ ಸ್ಥಳ ೭೩೦ ಹೆಕ್ಟೇರ್ ಎಂದು ಬರೆದಿದ್ದೆ. ಕ್ಷಮಿಸಿ ಅದು ಕಣ್ ತಪ್ಪಿನಿಂದ ಆದದ್ದು- ೧೮೦ ಹೆಕ್ಟೇರ್‌ನಷ್ಟು ಮಾತ್ರ ಬೇಕಾಗುತ್ತದೆ (ಪೂರಕ ದಾಖಲೆಗಳು ನನ್ನ ಬಳಿ ಇವೆ). ಬೇಕಾಗುವ ಕಾಲುವೆಯ ಉದ್ದ ಮತ್ತು ಅಗಲವನ್ನು ಲೆಕ್ಕಹಾಕಿದರೆ ೧೮೦ ಹೆಕ್ಟೇರ್‌ಗಳಷ್ಟು ಪ್ರದೇಶ ಮಾತ್ರ ಬೇಕಾಗುತ್ತದೆ. ಈ ೧೮೦ ಹೆಕ್ಟೇರ್‌ಗಳಲ್ಲಿ ಅರಣ್ಯ ಪ್ರದೇಶವಲ್ಲದೆ, ಕಾಫಿ ಹಾಗು ರಬ್ಬರ್ ಎಸ್ಟೇಟ್‌ಗಳು, ಸ್ಕ್ರಬ್ ಏರಿಯಾ ಮತ್ತು ಹಳ್ಳ, ಮಾರ್ಜಿನ್‌ಗಳು ಸೇರಿವೆ.

ಯೋಜನೆಯ ಸ್ವರೂಪದ ಸ್ಪಷ್ಟ ಕಲ್ಪನೆ ಇಲ್ಲದೆ ಈ ಬಗ್ಗೆ ಏನೂ ಹೇಳುವುದು ಕಷ್ಟ. ಕಿ.ಮೀ.ಗೆ ಏಳು ಇಂಚು ಇಳಿಜಾರು ಇರುವ ಕಾಲುವೆಗಳ ಮೂಲಕ ನೀರು ಸಂಗ್ರಹಿಸುವುದಾಗಿ ಪರಮೇಶ್ವರಯ್ಯನವರು ಹೇಳಿದ್ದಾರೆ. ಕೊಳವೆಗಳ ವಿಷಯ ಅವರು ಎಲ್ಲೂ ಮಾತಾಡಿದ್ದು ಕಾಣಲಿಲ್ಲ. ಮೇಲಿಂದ ಇಳಿದು ಬಂದ ನೀರು ಸಂಗ್ರಹ ಆಗಬೇಕಾದರೆ ತೆರೆದ ಕಾಲುವೆ ಬೇಕು; ಈ ಕಾಲುವೆಗಳಲ್ಲಿ ನೀರು ಇಂಗಬಾರದು. ಎಂದರೆ ಅವುಗಳನ್ನು ಕಾಂಕ್ರೀಟಿನಲ್ಲಿ ನಿರ್ಮಾಣ ಮಾಡಬೇಕು. ಕಾಲುವೆಯ ಪ್ರಾರಂಭದ ಗಾತ್ರವನ್ನು ಕೊನೆಯವರೆಗೂ ಉಳಿಸಿಕೊಳ್ಳುವುದು ತಾಂತ್ರಿಕವಾಗಿ ಸಾಧ್ಯವಿಲ್ಲ. ಹೋಗುತ್ತ ಹೋಗುತ್ತ ಸಂಗ್ರಹವಾಗುವ ನೀರಿನ ಪ್ರಮಾಣ ಹೆಚ್ಚುತ್ತ ಹೋಗುವುದರಿಂದ, ಕಾಲುವೆಯ ಗಾತ್ರವನ್ನೂ ಅದಕ್ಕೆ ತಕ್ಕಂತೆ ಹೆಚ್ಚಿಸುತ್ತ ಹೋಗಬೇಕಾದೀತು. ಇದೆಲ್ಲ ತಾಂತ್ರಿಕ ವಿಷಯಗಳು. "ಈ ಯೋಜನೆಗಾಗಿ ಕನಿಷ್ಠ ೦.೫ ಮೀ.ನಿಂದ ಗರಿಷ್ಠ ೫ ಮೀ ಪ್ರಮಾಣದ ಪ್ರೀ-ಸ್ಟ್ರೆಸ್ಡ್ ಆರ್.ಸಿ.ಸಿ. ಕೊಳವೆಗಳನ್ನು ಬಳಕೆ ಮಾಡಲಾಗುತ್ತದೆ." ಎಂದು ಪರಮಶಿವಯ್ಯನವರು ಎಲ್ಲಿ ಹೇಳಿದ್ದಾರೆ ಎಂದು ತಿಳಿಸಬಹುದೆ?

ಬೆಳೆಯುತ್ತಿರುವ ನಗರವಾದ ಮಂಗಳೂರನ್ನು ವಿಶೇಷ ಆರ್ಥಿಕ ವಲಯವನ್ನಾಗಿ ಮಾಡಿರುವುದರಿಂದ ದಿನವೊಂದಕ್ಕೆ ೫೦೦ ಮಿಲಿಯನ್ ಗ್ಯಾಲನ್‌ಗಳಷ್ಟು ನೀರು ಬೇಕೆಂದು ಹೇಳಿದ್ದಾರೆ! ಇದು ಸತ್ಯಕ್ಕೆ ದೂರವಾದುದು.

ಹೌದು. ೫೦೦ ಎಂಜಿಡಿ ಎಂದು ಯಾರಾದರೂ ಹೇಳಿದ್ದರೆ ಅದು ಸರಿಯಲ್ಲ.
ಇಡೀ ಮಂಗಳೂರನ್ನು ವಿಶೇಷ ಆರ್ಥಿಕ ವಲಯವನ್ನಾಗಿ ಮಾಡಿಲ್ಲ. ಈಗ ಮಂಗಳೂರು ವಿಶೇಷ ಅರ್ಥಿಕ ವಲಯ ಕಂಪೆನಿ ಎಂಬ ಕಂಪೆನಿ ಅಸ್ತಿತ್ವಕ್ಕೆ ಬಂದಿದೆ. ಈ ಕಂಪೆನಿಗೆ ಸುಮಾರು ೪೦೦೦ ಎಕ್ರೆ ಭೂಮಿ ಬೇಕಾಗಿದ್ದು, ಈಗ ಸುಮಾರು ೨೦೦೦ ಎಕ್ರೆಯಷ್ಟು ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.
ಈ ಕಂಪೆನಿಯ ಒಟ್ಟು ನೀರಿನ ಅವಶ್ಯಕತೆ ೪೫ ಎಂಜಿಡಿ. ಈ ಪೈಕಿ ನೇತ್ರಾವತಿ ಹಾಗೂ ಗುರುಪುರ ನದಿಗಳಿಂದ ಒಟ್ಟು ೧೫ ಎಂಜಿಡಿ ನೀರೆತ್ತಲು ಸರಕಾರ ಅನುಮತಿ ನೀಡಿದೆ. ಈ ೧೫ರ ಪೈಕಿ ೧೨.೫ ಎಂಜಿಡಿ ನೀರನ್ನು ಕಂಪೆನಿ ನೇತ್ರಾವತಿ ನದಿಯಿಂದ ಎತ್ತಲು ಉದ್ದೇಶಿಸಿದೆ. ಈ ಬಗ್ಗ ಪೈಪ್ ಲೈನ್ ಅಳವಡಿಸಲು ಈಗಾಗಲೇ ಟೆಂಡರು ಕರೆಯಲಾಗಿದೆ.
ನೇತ್ರಾವತಿ ನದಿಯ ನೀರು ಬಳಸುವ ಮುಖ್ಯ ಊರುಗಳೆಂದರೆ, ಕುಕ್ಕೆ ಸುಬ್ರಹ್ಮಣ್ಯ (ಕುಮಾರಧಾರೆ), ಧರ್ಮಸ್ಥಳ, ಉಪ್ಪಿನಂಗಡಿ, ಪುತ್ತೂರು, ಬಂಟ್ವಾಳ ಮತ್ತು ಮಂಗಳೂರು. ನದಿಯ ಉದ್ದಕ್ಕೂ ಅಸಂಖ್ಯಾತ ಸಣ್ಣ ಊರುಗಳಿವೆ. ಈ ಊರುಗಳೂ ನೀರಿಗಾಗಿ ನೇತ್ರಾವತಿಯನ್ನು ಆಶ್ರಯಿಸಿವೆ. ಅಸಂಖ್ಯಾತ ಪಂಪ್ ಸೆಟ್ ಗಳನ್ನು ನದಿಗೆ ಅಳವಡಿಸಲಾಗಿದೆ. (ನೇತ್ರಾವತಿ ಎಂದರೆ ಕುಮಾರಧಾರೆ ಮತ್ತು ನೇತ್ರಾವತಿ ನದಿಗಳ ಸಂಗಮ. ಸುಬ್ರಹ್ಮಣ್ಯದ ಕಡೆಯಿಂದ ಬರುವ ಕುಮಾರಧಾರೆ ಮತ್ತು ಧರ್ಮಸ್ಥಳದ ಕಡೆಯಿಂದ ಬರುವ ನೇತ್ರಾವತಿಗಳು ಉಪ್ಪಿನಂಗಡಿಯಲ್ಲಿ ಸಂಗಮವಾಗಿ ಮುಂದೆ ನೇತ್ರಾವತಿ ಎಂಬ ಹೆಸರಿನಲ್ಲಿ ಮಂಗಳೂರಿನವರೆಗೂ ಹರಿಯುತ್ತದೆ.)
ನೇತ್ರಾವತಿಗೆ ಈಗ ಮುಖ್ಯವಾಗಿ ಐದು ಅಣೆಕಟ್ಟುಗಳಿವೆ: ಮೊದಲನೆಯದು ಕುಮಾರಧಾರೆ ನದಿಗೆ ಪುತ್ತೂರಿನ ಸಮೀಪ ಕಟ್ಟಿರುವ ಅಣೆಕಟ್ಟು. ಇದರಿಂದ ಪುತ್ತೂರು ನಗರಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ಎರಡನೆಯದು ಉಪ್ಪಿನಂಗಡಿ ಸಮೀಪದ ನೀರಕಟ್ಟೆ ಎಂಬಲ್ಲಿ. ಇದು ಕಿರು ಜಲವಿದ್ಯುತ್ ಯೋಜನೆ. ಮೂರನೆಯದು ಎಂ ಆರ್ ಪಿ ಎಲ್ ಕಂಪೆನಿಯ ಅಣೆಕಟ್ಟು. ಈ ಅಣೆಕಟ್ಟಿನಿಂದ ಒಟ್ಟು ೬ ಎಂಜಿಡಿ ನೀರು ಎತ್ತಲಾಗುತ್ತಿದೆ. ನಾಲ್ಕನೆಯದು ಎ ಎಂ ಆರ್ ಪವರ್ ಪ್ರಾಜೆಕ್ಟ್ ನ ಅಣೆಕಟ್ಟು. ಇದು ಕಿರು ಜಲವಿದ್ಯುತ್ ಯೋಜನೆ. ಐದನೆಯದು ಮಂಗಳೂರು ಮಹಾನಗರ ಪಾಲಿಕೆಯದು. ಇದರಿಂದ ಕಳೆದ ವರ್ಷದ ವರೆಗೂ ೧೮ ಎಂಜಿಡಿ ನೀರೆತ್ತಲಾಗುತ್ತಿತ್ತು. ಈ ವರ್ಷದಿಂದ ೩೬ ಎಂಜಿಡಿ ನೀರೆತ್ತಲು ಸಿದ್ಧತೆಗಳು ನಡೆಯುತ್ತಿವೆ.
ಆರನೆಯದಾಗಿ ಮಂಗಳೂರು ವಿಶೇಷ ಆರ್ಥಿಕ ವಲಯ ಕಂಪೆನಿ ೧೨.೫ ಎಂಜಿಡಿ ನೀರೆತ್ತಲು ಸಿದ್ಧತೆಗಳನ್ನು ನಡೆಸುತ್ತಿದೆ
ಪರಮಶಿವಯ್ಯನವರ ಯೋಜನೆ ಮಳೆಯ ನೀರನ್ನು ಮಾತ್ರ ತಿರುಗಿಸುವ ಉದ್ದೇಶ ಹೊಂದಿರುವುದರಿಂದ, ಮೇಲುನೋಟಕ್ಕೆ ಅದರಿಂದ ಯಾವ ತೊಂದರೆಯೂ ಆಗುವಂತೆ ಕಾಣುವುದಿಲ್ಲ. ಆದರೆ ಸಮಸ್ಯೆ ಇಷ್ಟು ಸರಳ ಅಲ್ಲ.
ನೇತ್ರಾವತಿಯ ಜೀವ ಇರುವುದು ಪಶ್ಚಿಮ ಘಟ್ಟದ ಕಾಡುಗಳಲ್ಲಿ. ಅಲ್ಲಿ ಕಾಡು ಇದ್ದರೆ ಮಾತ್ರ ನೇತ್ರಾವತಿ ಮಾತ್ರವಲ್ಲ, ಪಶ್ಚಿಮ ಘಟ್ಟದಲ್ಲಿ ಹುಟ್ಟುವ ಎಲ್ಲ ನದಿಗಳಲ್ಲೂ ನೀರಿರುವುದು ಸಾಧ್ಯ. ಅಲ್ಲಿ ಕಾಡು, ಗುಡ್ಡಗಳನ್ನು ನಾಶ ಮಾಡುವುದೆಂದರೆ ಚಿನ್ನದ ಮೊಟ್ಟೆ ಇಡುವ ಕೋಳಿಯ ಹೊಟ್ಟೆ ಕೊಯ್ದ ಹಾಗೆಯೇ.
ಕರ್ನಾಟಕ ಸರಕಾರ ಈಗ ಸುಮಾರು ೨೭ ಕಿರುಜಲವಿದ್ಯುತ್ ಯೋಜನೆಗಳಿಗೆ ಈ ಪ್ರದೇಶದಲ್ಲಿ ಅನುಮತಿ ಕೊಟ್ಟಿದೆ. ಇವುಗಳಲ್ಲಿ ಕೆಲವು ಈಗಾಗಲೇ ಕಾರ್ಯಾರಂಭ ಮಾದಿವೆ. (ತೀರ ಇತ್ತೀಚೆಗೆ ಇನ್ನು ಮುಂದೆ ಕಿರು ಜಲವಿದ್ಯುತ್ ಯೋಜನೆಗಳಿಗೆ ಅನುಮತಿ ಕೊಡುವುದಕ್ಕೆ ಹೈಕೋರ್ಟು ತಡೆಯಾಜ್ನೆ ನೀಡಿದೆ) ಈ ಯೋಜನೆಗಳಲ್ಲಿ ಹಲವು, ನೇರವಾಗಿ ಪಶ್ಚಿಮ ಘಟ್ಟಗಳ ಹೃದಯ ಭಾಗದಲ್ಲೇ ಇವೆ. ಇವುಗಳ ಉತ್ಪಾದನಾ ಘಟಕಗಳಿಗಾಗಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಕಾಡು ನಾಶ ಆಗುತ್ತಿದೆ. ಅದಕ್ಕಿಂತ ಹೆಚ್ಚಾಗಿ, ಅವು ಉತ್ಪಾದಿಸುವ ವಿದ್ಯುತ್ತನ್ನು ಪೇಟೆಗೆ ಸಾಗಿಸಲು ವಿದ್ಯುತ್ ಲೈನುಗಳನ್ನು ಎಳೆಯುವಾಗ ಅಪಾರ ಪ್ರಮಾಣದ ಕಾಡು ನಾಶವಾಗುತ್ತದೆ. ಮಾತ್ರವಲ್ಲ, ಸದ್ಯಕ್ಕೆ ದುರ್ಗಮವಾಗಿರುವ ಈ ಪ್ರದೇಶಕ್ಕೆ ಎಲ್ಲ ರೀತಿಯ ಖದೀಮರುಗಳಿಗೂ ಪ್ರವೇಶ ಅತ್ಯಂತ ಸುಲಭವಾಗುತ್ತದೆ. ವಾಸ್ತವವಾಗಿ ಪಶ್ಚಿಮ ಘಟ್ಟಗಳನ್ನು ಉಳಿಸಿಕೊಳ್ಳಲು ಮಾಡಬೇಕಾದ ಮೊದಲ ಕೆಲಸವೆಂದರೆ ಅಲ್ಲಿಗೆ ಮನುಷ್ಯಪ್ರವೇಶವನ್ನು ಸಾಧ್ಯವಾದಷ್ಟೂ ತಡೆಯುವುದು. ಆದರೆ, ಈ ಕಿರು ಜಲವಿದ್ಯುತ್ ಯೋಜನೆಗಳಿಂದಾಗಿ ಪಶ್ಚಿಮಘಟ್ಟಗಳು ತಮ್ಮ ಸ್ವರೂಪವನ್ನೇ ಕಳೆದುಕೊಳ್ಳಲಿವೆ. ಇದರೊಂದಿಗೆ ನೇತ್ರಾವತಿ ತಿರುವು ಯೋಜನೆ ಜಾರಿಗೆ ಬಂದರಂತೂ, ಅಷ್ಟು ಭಾಗ ಪಶ್ಚಿಮ ಘಟ್ಟಗಳು ಸಂಪೂರ್ಣ ವಿರೂಪಗೊಳ್ಳಲಿವೆ. ಈ ತಪ್ಪನ್ನು, ಮುಂದೆ , ಬೇಕೆಂದರೂ ಸರಿಪಡಿಸಿಕೊಳ್ಳುವುದು ಸಾಧ್ಯವಿಲ್ಲ.


ಎರಡೂ ಜಿಲ್ಲೆಗಳಲ್ಲಿ ಸರಾಸರಿ ೭೪೫ ಮಿ.ಮೀ. ವಾರ್ಷಿಕ ಮಳೆಯಾಗುತ್ತದೆ. ಮಳೆ ಕೊಯ್ಲಿನಿಂದ ಸುಮಾರು ೮.೪೨ ಟಿ.ಎಮ್.ಸಿ ನೀರನ್ನು ಶೇಖರಿಸಬಹುದಾಗಿದೆ. ಎರಡೂ ಜಿಲ್ಲೆಗಳಿಗೆ ಒಟ್ಟು ೬೦ ಟಿ.ಎಂ.ಸಿ. ನೀರು ಬೇಕಾಗುತ್ತದೆ. ಅಂದರೆ ನಮಗೆ ಸುಮಾರು ೫೦ ಟಿ,ಎಂ.ಸಿ.ಗಳಷ್ಟು ನೀರು ಪ್ರತಿ ವರ್ಷ ಕೊರತೆ ಇದೆ.

ನೀವು ಯಾವ ಎರಡು ಜಿಲ್ಲೆಗಳನ್ನು ಹೇಳುತ್ತಿದ್ದೀರೆಂದು ನನಗೆ ತಿಳಿಯಲಿಲ್ಲ. ಆ ಪೈಕಿ ಒಂದು ಕೋಲಾರ ಎಂದು ಭಾವಿಸುತ್ತೇನೆ. ಅಲ್ಲಿ ಯಾರಾದರೂ, ವೈಯಕ್ತಿಕ ನೆಲೆಯಲ್ಲಾದರೂ ಮಳೆನೀರು ಸಂಗ್ರಹ ಮಾಡಿ ಬಳಸುತ್ತಿರುವ ಉದಾಹರಣೆಗಳು ನಿಮಗೆ ತಿಳಿದಿದೆಯೆ? ಅವರ ಅಭಿಪ್ರಾಯವೇನು? ಅಂಥವರ ವಿಳಾಸ ಸಿಕ್ಕಿದರೆ, ಅಲ್ಲಿಗೆ ಹೋಗಿ ನೋಡಿಬರುವ ಆಸೆ ನನಗಿದೆ. ದಯವಿಟ್ಟು ಗೊತ್ತಿದ್ದರೆ ತಿಳಿಸಿ.

ಕರಾವಳಿಯ ಜಾರ್ಜ್ ಫರ್ನಾಂಡಿಸ್ ರ್‍ಯೆಲ್ವೆ ಮಂತ್ರಿಯಾಗಿದ್ದಾಗ ಕೊಂಕಣ ರ್‍ಯೆಲ್ವೆ ಪ್ರಾಜೆಕ್ಟ್ ಜಾರಿಯಾಯ್ತು. ಇದರಲ್ಲಿ ಸುಮಾರು ೪೦೦೦ ಹೆಕ್ಟೆರುಗಳಷ್ಟು ಅರಣ್ಯ ನಾಶವಾದರೂ ಕರಾವಳಿಯ ಯಾವುದೇ ಪರಿಸರವಾದಿಗಳು ಚಕಾರವೆತ್ತಲಿಲ್ಲ.

ಇದು ವಾದದ ಮಾತು. ಪರಿಸರವಾದಿಗಳು ಅದನ್ನೂ ವಿರೋಧಿಸಿರಬಹುದು. ಇರಲಿ.
ಕೊಂಕಣ ರೈಲ್ವೆ ಹೋಗುವುದು ಉದ್ದಕ್ಕೂ ಸಮುದ್ರದ ಬದಿಯಲ್ಲಿ. ಬಹುಶಃ ಎಲ್ಲಿಯೂ ಅದರ ಹಳಿಗಳು ಸಮುದ್ರದಿಂದ ಒಂದು ಕಿ.ಮೀ. ಗಿಂತ ಹೆಚ್ಚು ದೂರದಲ್ಲಿಲ್ಲ. ಈ ಪ್ರದೇಶದಲ್ಲಿ ಇದ್ದಿರಬಹುದಾದ ಕಾಡಿಗೂ, ಪಶ್ಚಿಮಘಟ್ಟದ ಹೃದಯಭಾಗದಲ್ಲಿ ಇರುವ ಕಾಡಿಗೂ ಹೋಲಿಕೆ ಇಲ್ಲ.
"ಅಲ್ಲಿ ಕಡಿದಿದ್ದೇವೆ ಇಲ್ಲಿ ಯಾಕೆ ಕಡಿಯಬಾರದು?" ಎನ್ನುವುದಕ್ಕಿಂತ "ಅಲ್ಲಿ ಕಡಿದಿದ್ದೇವೆ, ಇಲ್ಲಾದರೂ ಉಳಿಸಿಕೊಳ್ಳೋಣ" ಎನ್ನುವುದು ನಮ್ಮ ದೃಷ್ಟಿಕೋನವಾಗಬೇಕು ಅಲ್ಲವೆ?


ಆದರೆ ಪರಮಶಿವಯ್ಯನವರ ವರದಿಯಂತೆ ನೇತ್ರಾವತಿ ನದಿಯ ಜಲಾನಯನದ ಪ್ರದೇಶದಲ್ಲಿ ಮಳೆ ಕೊಯ್ಲು ಮಾಡಿ ಕೇವಲ ೪೨ ಟಿ.ಎಂ.ಸಿ.ಯಷ್ಟು ನೀರನ್ನು ೪೦೦೦ದಿಂದ ೬೦೦೦ ಮಿ.ಮೀ. ಮಳೆಯಾಗುವ ಜುಲೈ-ಸೆಪ್ಟೆಂಬರ್ ತಿಂಗಳಲ್ಲಿ ಪೂರ್ವಕ್ಕೆ ಹರಿಸಿ, ಹೇಮಾವತಿಯಲ್ಲಿರುವ ಹೆಚ್ಚುವರಿ ನೀರಿಗೆ ಬೆರೆಸಿ ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಕೊಡಲಾಗುತ್ತದೆ.

ಪರಮಶಿವಯ್ಯನವರ ವರದಿಯ ಮೂರನೆಯ ಅಧ್ಯಾಯದ ೩.೦೯ರ ಕೊನೆಯಲ್ಲಿ ಹೀಗಿದೆ: "The total yield of water at Pani Mangalore site is 446.62 TMC and total utilisation by these two projects is 142.46 TMC only"
೫ನೇ ಅಧ್ಯಾಯದ ೫.೦೦ರಲ್ಲಿ ಹೀಗೆ ಹೇಳಿದೆ: "Total quantity of water available for this project 90.73"
"ಹೇಮಾವತಿಯ ನೀರಿನೊಂದಿಗೆ ಬೆರಸುವ" ವಿಷಯವನ್ನು ಪರಮಶಿವಯ್ಯನವರು ಪ್ರಸ್ತಾವಿಸಿಲ್ಲ. ೫ನೇ ಅಧ್ಯಾಯದ b vii ನಲ್ಲಿ ಹೀಗಿದೆ:
Main canal crosses Hemavathy River from right to left bank of the river
The main canal is continued further from E to F for a length of 16 Kms in contour with bed slope of seven inches per Km and crosses the Hemavathy river by means of a aqueduct. The bed level of the canal on the left Bank at pont F is 900 Mtrs The F.R. of Hemavathy reservoir is 891 Mtrs (2922 ft.) thus this canal will be about 9 Mtrs above the FRL of the Reservoir. "


ಈ ಯೋಜನೆಯಲ್ಲಿ ಪಶ್ಚಿಮ ಘಟ್ಟಗಳಲ್ಲಿ ಯಾವುದೇ ಅಣೆಕಟ್ಟನ್ನು ಕಟ್ಟುವುದಿಲ್ಲ

ಅಧ್ಯಾಯ ೧ ರ ೧.೦೫: Any scheme for utilisation of heavy quantity of water, involves submersion of large areas of fertile lands, besides Rehabilitation of number of villages/Towns. But the project is entirely different and makes use of existing Tanks for storage"
ಅಧ್ಯಾಯ ೩ರ ೩.೧೧: "As the configuration does not permit large scale storage reservoirs it is envisaged to Construct 27 small reservoirs to hold the yield available from the respective C.A. of hallas ......."
ಅಧ್ಯಾಯ ೫ ರ ೫.೦೨ i): "...Total capacity of 27 reservoirs is about 39.365 TMC, some extra storage capacity is kept to store flash flood waters, since extra submersion area is negligible."
ಈ ಯೋಜನೆಯನ್ನು ರೂಪಿಸುವಾಗ ಪರಮಶಿವಯ್ಯನವರಿಗೆ ಹತ್ತಿರ ಹತ್ತಿರ ಎಂಬತ್ತು ವರ್ಷ ಆಗಿರಬೇಕು. ಅವರ ವರದಿಯಲ್ಲಿ ಎಷ್ಟೋ ಸಲ ಅವರು ಹೇಳಿದ್ದನ್ನೇ ಹೇಳುತ್ತಾರೆ. ಅವರು ಹಿರಿಯರು ಎಂಬುದರಿಂದ, ಅವರ ವಯಸ್ಸಿಗೆ ಗೌರವ ಕೊಟ್ಟು ಅದನ್ನು ಸಹಿಸಿಕೊಳ್ಳಬಹುದು. ಆದರೆ ಮೇಲಿನ ಅವರ ಮಾತುಗಳನ್ನು ಹೇಗೆ ಅರ್ಥ ಮಾಡಿಕೊಳ್ಳುವುದು? "But the project is entirely different and makes use of existing Tanks for storage" ಎಂಬ ಅವರ ಮಾತು ಅಪ್ಪಟ ಸುಳ್ಳಲ್ಲವೆ?
/

ಪಶ್ಚಿಮ ಘಟ್ಟಗಳನ್ನು ಸೀಳುವ ಅವಶ್ಯಕತೆಯಿಲ್ಲ.

ಅಧ್ಯಾಯ ೫ ರ ೫.೦೧ a (ಎರಡನೇ ಪ್ಯಾರಾ):
"It is proposed to start the Garland canal from Gadikal Gudda at the peak line of western ghat with C.B.L. of 930 mtrs and reach 150th K.M. with a canal bed slope of seven inches per Km with sufficient canal capacity to intercept and convey all the Run-off water of normal rain-falling on the catchment area between western ghat peak line and the canal alignment......"
ಗುಡ್ಡದ ಮಧ್ಯಭಾಗದಲ್ಲಿ ಕಾಲುವೆ ತೆಗೆಯುವುದೆಂದರೆ ಗುಡ್ಡವನ್ನು ಸೀಳುವುದು ಎಂದೇ ಅರ್ಥವಲ್ಲವೆ?
ಒಂದು ಕಿ.ಮೀ.ಗೆ ಏಳು ಇಂಚು ಇಳಿಜಾರು ಇರುವ ಕಾಲುವೆ ಎನ್ನುತ್ತಾರೆ. ಅದರ ಅಗಲ ಆಳಗಳನ್ನು ಹೇಳಿಲ್ಲ. (ಮುಂದೆ ೮೨೦೦ಕ್ಯೂಸೆಕ್ಸ್ ನೀರನ್ನು ಸಾಗಿಸಬಲ್ಲ ಕಾಲುವೆ, ಹಾಗಾಗಿ ಇದರಲ್ಲಿ ಜಲಸಾರಿಗೆ ಸಾಧ್ಯ ಎಂದಿದ್ದಾರೆ). ಗಡಿಕಲ್ ಗುಡ್ಡ ಸಮುದ್ರ ಮಟ್ಟದಿಂದ ೧೨೦೦ ಮೀಟರ್ ಎತ್ತರ ಇದೆಯೆಂದು ಭಾವಿಸೋಣ. ೯೩೦ನೇ ಮೀಟರಿನಲ್ಲಿ ಕಾಲುವೆ ಮಾಡಿದರೆ, ಮೇಲಿನ ೨೭೦ ಮೀಟರ್ ಎತ್ತರದಿಂದ ನೀರು ಇಳಿದು ಬಂದು ಕಾಲುವೆಯಲ್ಲಿ ಸಂಗ್ರಹವಾಗಿ ಮುಂದೆ ಹರಿಯಬೇಕು. ಎಂದರೆ ಕಾಲುವೆಯ ಮೇಲುಭಾಗ ೨೭೦ ಮೀಟರ್ ಇಳಿಜಾರಾದ ಗುಡ್ಡ ಮತ್ತು ಕೆಳಭಾಗ ೯೦೦ ಮೀಟರ್ ಇಳಿಜಾರಾದ ಗುಡ್ಡ. ಮಳೆಗಾಲದಲ್ಲಿ ಮೇಲಿಂದ ಗುಡ್ಡ ಜರಿದರೆ ಕಾಲುವೆ ಕಟ್ಟಿಕೊಳ್ಳುತ್ತದೆ. ಕೆಳಗಿಂದ ಜರಿದರೆ, ಕಾಲುವೆ ಹಿಸಿದು ನೀರು ಕೆಳಗೆ ಹರಿಯುತ್ತದೆ. ಗುಡ್ಡ ಜರಿಯದ ಹಾಗೆ ಮಾಡುವ ತಾಂತ್ರಿಕತೆ ಇದೆಯೆ? (ಘಾಟಿ ರಸ್ತೆಗಳಲ್ಲಿ ೩೦-೪೦ ಅಡಿ ಎತ್ತರದ ದರೆಗೆ ಕಲ್ಲು ಕಟ್ಟುವುದನ್ನು ಕಂಡಿದ್ದೇನೆ. ಆದರೆ ಅಂಥಲ್ಲೂ, ಕಲ್ಲಿನ ಸಮೇತ ಜರಿದು ಬೀಳುವುದು ಮಾಮೂಲು.)
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಮಾತಿದೆ. ಪಶ್ಚಿಮ ಘಟ್ಟಗಳ ಪರ್ವತಗಳು, ನೆಲದ ಮೇಲೆ ಕವುಚಿಹಾಕಿದ ತೆಂಗಿನಕಾಯಿಯ ಕರಟಗಳಲ್ಲ. ಹತ್ತಿರ ಹೋಗಿ ನೋಡಿದರೆ ಮಾತ್ರ ಅಲ್ಲಿ ಪರಮಶಿವಯ್ಯನವರು ಹೇಳುವ ಬೃಹತ್ ಕಾಲುವೆಗಳನ್ನು ತೋಡಿದರೆ ಪಶ್ಚಿಮಘಟ್ಟಕ್ಕೆ ಆಗುವ ಹಾನಿಯ ಕಲ್ಪನೆ ಬರಬಹುದು. ಅಥವಾ ಆಗಲೂ ಬರುವುದು ಕಷ್ಟ.
ಪರಮಶಿವಯ್ಯನವರು ಹೇಳುತ್ತಿರುವ ಭಾಗದ ಪಶ್ಚಿಮ ಘಟ್ಟಗಳ ಸ್ವರೂಪ ಸಾಮಾನ್ಯವಾಗಿ ಹೀಗಿದೆ. ಗುಡ್ಡದ ತಳದಿಂದ ಪ್ರಾರಂಭಿಸಿ ಸುಮಾರು ಮುಕ್ಕಾಲು ಭಾಗದ ಎತ್ತರದವರೆಗೆ ಬೇರೆ ಬೇರೆ ಸ್ವರೂಪದ ಅರಣ್ಯ. ನಂತರ ಉಳಿದ ಕಾಲುಭಾಗದಲ್ಲಿ, ಎಂದರೆ ಗುಡ್ಡದ ನೆತ್ತಿಯ ಭಾಗದಲ್ಲಿ, ಆಳೆತ್ತರದ ಹುಲ್ಲು. ಈ ಹುಲ್ಲು ಆನೆಗಳ ಆಹಾರ. ಹಾಗಾಗಿಯೇ ಈ ಪ್ರದೇಶದಲ್ಲಿ ಆನೆಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಇತ್ತ ಸುಬ್ರಹ್ಮಣ್ಯದಿಂದ ಸಕಲೇಶಪುರಕ್ಕೆ ಹೋಗುವ ರೈಲುದಾರಿ ಆನೆಗಳ ತಿರುಗಾಟಕ್ಕೆ ಅಡ್ಡಿಯಾಗಿ ನಿಂತಿದೆ. ಶಿರಾಡಿ ಘಾಟಿಯ ಹೆದ್ದಾರಿಯಲ್ಲಿ ಆನೆಗಳ ಸಂಚಾರ ಅಸಾಧ್ಯವಲ್ಲವಾದರೂ, ವಾಹನಗಳ ದಟ್ಟಣೆಯಿಂದಾಗಿ ಅವುಗಳು ಸ್ವಚ್ಛಂದವಾಗಿ ತಿರುಗಾಡುವಂತಿಲ್ಲ. ಇನ್ನು ಅವುಗಳ ಆಹಾರವಾದ ಹುಲ್ಲಿರುವ ಪ್ರದೇಶಕ್ಕೇ ಪರಮಶಿವಯ್ಯನವರ ಕಾಲುವೆ ಅಡ್ಡ ಬಂತೆಂದರೆ, ಬಹುಶಃ ಕೋಟಿ ಕೋಟಿ ವರ್ಷಗಳಿಂದ ಈ ಭಾಗವನ್ನು ತಮ್ಮ ಮನೆಯಾಗಿ ಮಾಡಿಕೊಂಡಿರುವ ಆ ಬಡಪ್ರಾಣಿಗಳು ಹೊಟ್ಟೆ ತುಂಬಿಸಿಕೊಳ್ಳಲು ಎಲ್ಲಿಗೆ ಹೋಗಬೇಕು? ಅವು ಊರು ನುಗ್ಗದೆ ಬೇರೆ ದಾರಿ ಇದೆಯೆ?


ಮಳೆಯಾಗುವ ದಿನಗಳು ಕ್ರಮೇಣ ಕಡಿಮೆಯಾಗುತ್ತಿರುವುದರಿಂದ ಕೆರೆಗಳಲ್ಲಿ ನೀರು ಶೇಖರಣೆಯಾಗುತ್ತಿಲ್ಲ.

ಇದನ್ನು ಅಂಕಿ ಅಂಶಗಳ ಮೂಲಕ ನಿರೂಪಿಸಬಹುದೆ?

ಪರಮಶಿವಯ್ಯನವರನ್ನು ಭೇಟಿ ಮಾಡಿ ಚರ್ಚಿಸಿದರೆ ಅವರಿಗಿರುವ ಆತಂಕ ದೂರವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಈಗ ಸುಮಾರು ಐದು ವರ್ಷಗಳ ಕೆಳಗೆ ನಾವು ಪರಮಶಿವಯ್ಯನವರನ್ನು ಮಂಗಳೂರಿಗೆ ಕರೆಸಿ, ಅವರ ಯೋಜನೆಯನ್ನು ವಿವರಿಸಲು ಅವರಿಗೆ ಅವಕಾಶ ಮಾಡಿಕೊಟ್ಟೆವು. ಅಷ್ಟು ದೂರದಿಂದ ಮಂಗಳೂರಿಗೆ ಬಂದ ಅವರು-ಸಾವಿರಾರು ಕೋಟಿ ರೂಪಾಯಿ ಖರ್ಚಿನ ಯೋಜನೆಯನ್ನು ರೂಪಿಸಿದವರು-ಸುಮಾರು ಇಪ್ಪತ್ತು ನಿಮಿಷ ಯೋಜನೆಯ ಬಗ್ಗೆ ಮಾತಾಡಿದರು. ಸಂಘಟಕರಾಗಿ ನಾವು ಅವರಿಗೆ ಸಮಯವನ್ನೇನೂ ನಿಗದಿಪಡಿಸಿರಲಿಲ್ಲ. ಅವರು ತಮ್ಮ ಯೋಜನೆಯನ್ನು ವಿವರಿಸಲು ಬೋರ್ಡು, ಸೀಮೆಸುಣ್ಣ ಆಗಲಿ, ಪವರ್ ಪಾಯಿಂಟ್ ಆಗಲಿ ಬಳಸಲಿಲ್ಲ. ಭಾಷಣದ ನಂತರ ಬಂದ ಹೆಚ್ಚಿನ ಪ್ರಶ್ನೆಗಳಿಗೆ ಯೋಜನೆಯನ್ನು ಹೈದರಾಬಾದಿನ ಯಾವುದೋ ಸಂಸ್ಥೆಗೆ ಕಳಿಸಲಾಗಿದೆ, ಅಲ್ಲಿಂದ ವರದಿ ಬಂದ ಮೇಲೆ ಎಲ್ಲ ಸ್ಪಷ್ಟವಾಗುತ್ತದೆ ಎಂಬ ಉತ್ತರವನ್ನೇ ಮತ್ತೆ ಮತ್ತೆ ಕೊಟ್ಟರು. ಹಾಗಾಗಿ ಅವರ ಹತ್ತಿರ ಚರ್ಚಿಸಿ ನಮಗೆ ಯಾವ ಪ್ರಯೋಜನವೂ ಆಗಲಿಲ್ಲ.

6 ಕಾಮೆಂಟ್‌ಗಳು:

ಭಾಮತಿ ಹೇಳಿದರು...

ಒಳ್ಳೆಯ ತರ್ಕಬದ್ದ ವಿವರಣೆ; ಅನೇಕ ಸಂಗತಿಗಳು ತಿಳಿಯುವಂತಾಯಿತು; ಅಭಿನಂದನೆ.
ಇನ್ನಾದರೂ ಈ ಯೋಜನೆಯನ್ನು ಕೈಬಿಡುವರೆ?
ಕೇರಳದ ಸೈಲೆಂಟ್ ವ್ಯಾಲಿ ಯೋಜನೆಯನ್ನು ಕೋನೆಗೂ, ಅಂದಿನ ಪ್ರಧಾನಿ ಇಂದಿರಾಗಂಧಿಯವರು, (ಬಹುಶಃ ಡಾ.ಸ್ವಾಮಿನಾಥನ್ ರ ಸಲಹೆ ಮೇರೆ) ಶಾಶ್ವತವಾಗಿ ಸ್ಥಗಿತಗೊಳಿಸಿದರು. ಇದೇ ರೀತಿ ನಮ್ಮಲ್ಲೂ ಕಳಕಳಿಯುಳ್ಳ ತಜ್ಞರು ಸರಕಾರಕ್ಕೆ ಸಲಹೆ ನೀಡಲೆಂದು ಹಾರೈಸೋಣ.

Govinda Nelyaru ಹೇಳಿದರು...

ಜಲಾಶಯ ರಚನೆಯ ಒಂದು ಉದ್ದೇಶವೇ ನೆರೆ ನಿಯಂತ್ರಣ. ಆದರೆ ಕಟ್ಟಿಯಾದ ಮೇಲೆ ಅದನ್ನು ಇಂಜಿನಿಯರ್ ಗಳ ವಶ ಬಿಡುತ್ತಾರೆ. ಅವರು ಹಿಂದು ಮುಂದು ನೋಡದೆ ಮೊದಲ ಮಳೆಗೆ ಜಲಾಶಯ ತುಂಬಿಸಿಕೊಳ್ಳುತ್ತಾರೆ. ಹಾಗೆ ಹಲವಾರು ಸಲ ನೆರೆಗೆ ಕಾರಣವೇ ಜಲಾಶಯ ಹೊರತು ಮಳೆಯಲ್ಲ. ಅದುದರಿಂದ ಈ ನದಿ ತಿರುವು ವರ್ಗಾವಣೇಯೂ ಎಪ್ರಿಲ್ ತಿಂಗಳ ಮಳೆಯನ್ನು ತಿರುಗಿಸಿದರೆ ನಮಗೆ ತುಂಬಾ ತೊಂದರೆಯಾಗುವ ಸಾದ್ಯತೆ ಇರುತ್ತದೆ.

ಯಾವುದೋ ಪ್ರಾಚೀನ ಮಾಹಿತಿ ಆದರಿಸಿ ಯೋಜನೆ ತಯಾರಿಸುತ್ತಾರೆ. ಗಂಗಾ ಕಾವೇರಿ ಲಿಂಕಿಸುವ ಯೋಜನೆಯೂ ಅಂತಹದರಲ್ಲೊಂದು. ಆದರೆ ಈಗ ನಿರ್ಗಲ್ಲ ರಚನೆಯು ಕಮ್ಮಿಯಾಗಿ ಗಂಗಾ ನದಿಯ ಹರಿವೇ ಕಡಿಮೆಯಾಗುತ್ತಿದೆ. ಹಾಗೆ ಇಲ್ಲೂ ಮೊದಲ ಪಾಲು ಕೋಲಾರಕ್ಕೆ, ಕೊರತೆಯಾದರೆ ದಕ್ಷಿಣ ಕನ್ನಡಕ್ಕೆ ಎಂದಾದರೆ ಕಷ್ಟ.

ಪರಮಶಿವಯ್ಯನವರಿಗೆ ಮಳೆ ಕೊಯಿಲು ಅರ್ಥಮಾಡಿಸುವುದು ಕಷ್ಟ. ಮೊದಲು ಅಲ್ಲಿ ಅಂದರೆ ಕೋಲಾರ ತುಮಕೂರಿನಲ್ಲಿ ಬೀಳುವ ನೀರನ್ನು ಸದುಪಯೋಗಗೊಳಿಸಿದರೆ ಚೆನ್ನ.

Krishna Mohan ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Krishna Mohan ಹೇಳಿದರು...

ಪಶ್ಚಿಮ ಘಟ್ಟವನ್ನು ಕೊಚ್ಚಿ ಬಗೆದು ಲೂಟಿ ಮಾಡುವುದು ಬಿಟ್ಟರೆ ಇನ್ನೇನೂ ಉಪಯೋಗಕ್ಕಿಲ್ಲದ ಈ ಯೋಜನೆಯನ್ನು ಜಾರಿ ಮಾಡಲು ಪಕ್ಷಬೇಧವನ್ನು ಮರೆತು ಮುಗಿಬೀಳುತ್ತಿರುವ ರಾಜಕಾರಣಿಗಳನ್ನು ನೋಡಿದರೆ ಬಳ್ಳಾರಿಗಿಂತಲೂ ಜಾಸ್ತಿ ಕೊಳ್ಳೆ ಹೊಡೆಯಲು ಸಿಗುತ್ತದೆ ಎಂಬ ಭಾವನೆ ಬರುತ್ತದೆ. ಸುಲಭದಲ್ಲಿ ಹಾಗೂ ಈ ಯೋಜನೆ ಹಲವಾರು ಪಟ್ಟು ಉಪಯೋಗಕಾರಿಯಾಗಿರುವ ಮಳೆ ಕೊಯಿಲನ್ನು ಹಣದ ಬೆಂಬತ್ತಿರುವ ಇವರಿಗೆ ಅರ್ಥಮಾಡಿಸುವುದು ಕಷ್ಟ.
-ಕೃಷ್ಣ ಮೋಹನ

ಅನಾಮಧೇಯ ಹೇಳಿದರು...

ಮೊನ್ನೆ ಮೊನ್ನೆ ಸರಕಾರ ನೇತ್ರಾವತಿ ತಿರುವಿನ ಮಾತು ಹೇಳದೆ, ಎತ್ತಿನ ಹಳ್ಳದಿಂದ ನೀರೆತ್ತುವ ಯೋಜನೆಗೆ ಅಷ್ಟು ಹಣ ಒದಗಿಸಿದೆ. ಅದನ್ನೂ ಇಲ್ಲಿ ಗಮನಿಸಬೇಕು. ಧರ್ಮಸ್ಥಳದ ಬದಿಯಿಂದ ಬರುವ ನೇತ್ರಾವತಿ, ಸುಬ್ರಹ್ಮಣ್ಯದ ಕಡೆಯಿಂದ ಬರುವ ಕುಮಾರಧಾರಾದಷ್ಟೇ ಮುಖ್ಯವಾಗಿ ಶಿರಾಡಿ ಘಾಟಿ ದಾರಿಯ ಬದಿಯಲ್ಲೇ ಬರುವ ನೀರ ಹರಿವೂ ನೇತ್ರಾವತಿಯದ್ದೇ ಉಪನದಿ. ಇದಕ್ಕೆ ಕೆಳ ವಲಯದಲ್ಲಿ ಗುಂಡ್ಯ ಹೊಳೆ, ಕೆಂಪೊಳೆ ಎಂದಿತ್ಯಾದಿ ಸ್ಥಳೀಯ ಹೆಸರಿರುವಂತೆ ಮೇಲಿರುವ ಕೆಲವು ಹೆಸರುಗಳಲ್ಲಿ ಎತ್ತಿನ ಹೊಳೆ, ಹೊಂಗಡಳ್ಳವೂ ಸೇರುತ್ತದೆ. ಕೆಂಪೊಳೆ ಪ್ರದೇಶದಲ್ಲಿ ಗುಂಡ್ಯ ಮಿನಿ ಜಲವಿದ್ಯುತ್ ಎಂಬ ವಾಮನ ಪಾದ ಊರಿ ವ್ಯಾಪಿಸುತ್ತಿರುವುದು, ಅತ್ತ ಹೊಂಗಡಳ್ಳದ ಬಳಿ ಎಲ್ಲಾ ಪ್ರಜಾಸತ್ತಾತ್ಮಕ ಸರಕಾರದ ಸಮದೃಷ್ಟಿಯನ್ನು ಕಿತ್ತೆಸೆದು ಗುಂಡ್ಯ ಜಲ ವಿದ್ಯುತ್ (ಮಹಾ) ಯೋಜನೆಗೆ ಪೋಲಿಸ್ ಕೋಟೆ ಕಟ್ಟಿ, ಅಡಿಪಾಯವನ್ನು ಯಡ್ಯೂರಪ್ಪ (ಜವಾಬ್ದಾರಿಯುತ ಮುಖ್ಯಮಂತ್ರಿ ಎಂದು ಖಂಡಿತಾ ಹೇಳಲಾರೆ) ಹಾಕಿದ್ದನ್ನೂ ಅವಶ್ಯ ಉಲ್ಲೇಖಿಸಬೆಕು. ಡಾ| ಮಧು ಸೀತಪ್ಪನವರು `ಭಾವ ಅಲ್ಲ ಅಕ್ಕನ ಗಂಡ' ಎಂಬ ಭ್ರಮೆಯಲ್ಲೇ ಇದ್ದಾರೆ. ಇನ್ನು ಇನ್ನೂ ನಮ್ಮ ಮೂರ್ಖತನಕ್ಕೆಲ್ಲಾ ಒದಗುವಷ್ಟು ಪ್ರಾಕೃತಿಕ ವಾಸ್ತವಗಳು ಉಳಿದಿಲ್ಲ.
ಅಶೋಕವರ್ಧನ

ಪಂಡಿತಾರಾಧ್ಯ ಹೇಳಿದರು...

ಪ್ರೀತಿಯ ಸುಂದರರಾವ್,
ನೇತ್ರಾವತಿಯನ್ನು ಪೂರ್ವಕ್ಕೆ ತಿರುಗಿಸುವುದರ ಶಾಶ್ವತ ದುಷ್ಪರಿಣಾಮಗಳ ಬಗ್ಗೆ ತುಂಬ ವಿಶದವಾಗಿ ತಿಳಿಸಿದ್ದೀರಿ.
ನೇತ್ರಾವತಿ ಮಾತ್ರವಲ್ಲ ಪಶ್ಚಿಮಘಟ್ಟವನ್ನು ಮುಂದಾಲೋಚನೆಯಿಲ್ಲದೆ ಸೂರೆಮಾಡುವುದು ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಕೊಂದಹಾಗೆ ಎನ್ನುವುದು ಅತ್ಯಂತ ಸಮರ್ಪಕವಾದ ವಿವರಣೆ.
ಮತ್ತೆ ಸರಿಪಡಿಸಲಾಗದ ದುಸ್ಸಾಹಸವನ್ನು ಕೈಬಿಡಲಿ.
ಪ್ರಕೃತಿಯ ಸಮತೋಲವನ್ನು ಕದಡದಿರಲಿ.